Thursday, December 29, 2016

ಮೈ3.ಶಾರದೆ, ಸರಸ್ವತಿ ಮತ್ತು ಗುರುನಾಥರು

ಜೀವನದಲ್ಲಿ ಅದ್ಭುತಗಳು ಹೇಗೆ ಹೇಗೆ ದಾಪುಗಾಲು ಇಡುತ್ತಾ ಬರುತ್ತವೆ ಎನ್ನುವ ಅರಿವು ಬಹಳ ಕಡಿಮೆ ಅನಿಸುತ್ತದೆ.. ಅದು ಹೇಗೆ ಬಂದರೆ ಹಾಗೆ ಸ್ವೀಕರಿಸುತ್ತೇವೆ ಎಂದು ನಿಂತರೆ, ಅದು ತೋರುವ ಹಾದಿಯ ಪಯಣವೇ ಸೊಗಸು.

ಅಪ್ಪ ಅಮ್ಮನಿಗೆ ಮಕ್ಕಳ ಏಳಿಗೆಯಲ್ಲಿಯೇ ಸಂತಸ.. ಮಕ್ಕಳಿಗೆ ಅಪ್ಪ ಅಮ್ಮನ ಕಣ್ಣಲ್ಲಿ ಸಂತಸ ಕಂಡರೆ ಬದುಕು ಸಾರ್ಥಕ ಎನ್ನುವ ಭಾವ.

ಗೆಳೆತನ, ಸ್ನೇಹ, ಜೊತೆಗಾರ, ಜೊತೆಗಾತಿ ಈ ನುಡಿಮುತ್ತುಗಳು ಜೀವನದಲ್ಲಿ ನೆಡೆಯುವಾಗ ಸಿಗುವ ಹೊನ್ನಿನ ಕುಸುಮಗಳು.

ಮೈತ್ರಿ ಎಂದು ಹೆಸರಿಟ್ಟು..ನನ್ನ ಮೈತ್ರಿ My Three ಜೊತೆಗೆ ಎಂದು ನಿಂತ ನನ್ನ ಚಿಕ್ಕಪ್ಪ.. ಅವರಿಗೆ ಜೊತೆಯಾದದ್ದು ಶಾರದೆ, ಸರಸ್ವತಿ ಮತ್ತು ಗುರುನಾಥರು.

ಶಾರದೆ ಬಾಳಸಂಗಾತಿಯಾಗಿ ಬಂದು ನಿಂತರು.. ಸರಸ್ವತಿ ಪುಸ್ತಕರೂಪದಲ್ಲಿ ಬಂದರು..ಗುರುನಾಥರು ಚಿಕ್ಕಪ್ಪನ ಬಾಳ ಪಥಕ್ಕೆ ದಾರಿ ದೀಪವಾಗಿ ನಿಂತರು.

ಶಾರದೆ ನನ್ನ ಚಿಕ್ಕಮ್ಮ ಅಕ್ಷರಶಃ ಶಾರದೆಯೇ ಹೌದು. ಅವರ ಕಲಾವಂತಿಕೆ, ಮನೆಯಲ್ಲಿನ ಅಚ್ಚುಕಟ್ಟು, ಶಿಸ್ತು ಬದ್ಧ ಜೀವನ ಇವೆಲ್ಲವೂ ಚಿಕ್ಕಪ್ಪನಿಗೆ ವರವಾಗಿ ಬಂದಿದೆ ಎಂದರೆ ಖಂಡಿತ ಇದು ಉತ್ಪ್ರೇಕ್ಷೆಯಲ್ಲ. ಮೈತ್ರಿ ಎನ್ನುವ ಆ ದೇವಾಲಯವನ್ನು ಹೊಕ್ಕರೆ ಕಣ್ಣಿಗೆ ಕಾಣುವುದು ಶಿಸ್ತು, ಅಚ್ಚುಕಟ್ಟು ಮತ್ತು ಸೊಗಸಾದ ವಿನ್ಯಾಸದಲ್ಲಿ ಮೂಡಿಬಂದಿರುವ ದೇಗುಲಕ್ಕೆ ಒಮ್ಮೆ ಕೈಮುಗಿಯದೇ ಯಾರೂ ಹೊರಗೆ ಬರುವುದಿಲ್ಲ.

ಚಿಕ್ಕಪ್ಪ, ತಮ್ಮ ಭಾಷಾ ಪ್ರೌಢಿಮೆ,  ಅಂದು ಕೊಂಡಿದ್ದನ್ನು ಸಾಧಿಸುವ ಛಲ, ಕಲಿಕೆಯ ರಾಕ್ಷಸ ಹಸಿವು ಅವರನ್ನು ಒಬ್ಬ ಸರಳಜೀವಿಯನ್ನಾಗಿ ಮಾಡಿದೆ. ತಂದೆ ತಾಯಿಯಿಂದ ಬಂದ ಜ್ಞಾನ ಭಕ್ತಿಯ ಬಳುವಳಿಯನ್ನು ಅಷ್ಟೇ ಸಮಂಜಸ ರೀತಿಯಲ್ಲಿ ತಮ್ಮ ಜೀವನಕ್ಕೂ ಅಳವಳಿಸಿಕೊಂಡು, ಎಲ್ಲಿಯೂ ಎಲ್ಲೇ ಮೀರದೆ, ಆದರೆ ಕಲಿಕೆಗೆ ಎಲ್ಲೇ ಎಲ್ಲಿದೆ ಎಂದು ಪ್ರಶ್ನಿಸುತ್ತಲೇ, ತಮ್ಮ ಜೀವನದಲ್ಲಿ ಬಂದ ಪ್ರತಿ ಸವಾಲಿನ ಘಟನೆಯೂ ಕೂಡ ಅವರ ಮುಂದೆ ಮಂಡಿಯೂರಿ ಕೂರುವ ಹಾಗೆ ಮಾಡಿಸಿಕೊಂಡ ತಾಳ್ಮೆ ಹಾಗೂ ಛಲಭರಿತ ಸಾಧನೆ ನನ್ನ ಚಿಕ್ಕಪ್ಪನದು.

ಕಳೆದ ೨೨ನೇ ಡಿಸೆಂಬರ್ ೨೦೧೬ ಇಸವಿ.. ಒಂದು ಅದ್ಭುತ ದಿನ ಅವರ ಬಾಳಿನಲ್ಲಿ ಮೂಡಿ ಬಂತು. ೬೦ ಸಂವತ್ಸರಗಳನ್ನು ದಾಟಿ ಸಾಧಿಸುವ ಛಲಗಾರರಿಗೆ ಸ್ಪೂರ್ತಿಯಾಗಿ ನಿಂತದ್ದು ಅಂದಿನ ವಿಶೇಷ. ಅಪ್ಪ ಅಮ್ಮ ತಮ್ಮ ಮಕ್ಕಳ ಏಳಿಗೆಯನ್ನು ನೋಡುವುದು, ಅವರ ಬಾಲ್ಯ, ಯೌವನಾವಸ್ಥೆ, ಮದುವೆ, ಮಕ್ಕಳು ಹೀಗೆ ಜೀವನದ ಅನೇಕ ಮಗ್ಗುಲಗಳನ್ನು ನೋಡುವುದು ಸಹಜ.

ಈ ೬೦ ರ ಸಂಭ್ರಮಕ್ಕೆ ಸಾಕ್ಷಿಯಾಗಿ ನಿಲ್ಲುವುದು, ಜೀವನವನ್ನು ಇನ್ನೊಮ್ಮೆ ತಿರುಗಿ ನೋಡಿಕೊಳ್ಳುವ ಅವಕಾಶ. ಮಕ್ಕಳಿಗೆ 
ತಮ್ಮ ಮಾತಾ ಪಿತೃಗಳು ಮಧುರ ಬಂಧನದಲ್ಲಿ ಸೇರಿದ್ದನ್ನು ತಮ್ಮ ಕಣ್ಣಾರೆ ಕಾಣುವ ಅವಕಾಶ. ಮಾಂಗಲ್ಯಧಾರಣೆ, ಸಪ್ತಪದಿ, ಹಣೆಗೆ ರಕ್ಷೆ.. ವಾಹ್ ಇವೆಲ್ಲ ಪೂರ್ವ ಜನ್ಮದ ಪುಣ್ಯ ಎನ್ನಬೇಕು.

ಈ ಸಂದರ್ಭದಲ್ಲಿ ನನ್ನ ತಂದೆಯವರ ಭೀಮವ್ರತ ಶಾಂತಿ ಸಂಭ್ರಮದಲ್ಲಿ ನನ್ನ ಮೆಚ್ಚಿನ ಚಿಕ್ಕಪ್ಪ ಶಿವಮೊಗ್ಗೆಯಲ್ಲಿರುವ ಸೋಮಶೇಖರ್ ಅರ್ಥಾತ್ ಸೋಮಿ ಚಿಕ್ಕಪ್ಪ ನನ್ನ ಅಪ್ಪನಿಗೆ ಹೇಳಿದ್ದು ನೆನಪಿಗೆ ಬರುತ್ತದೆ "ಮಂಜಣ್ಣ.. ಇಂತಹ ಮಕ್ಕಳನ್ನು ಪಡೆಯೋಕೆ ಪುಣ್ಯ ಮಾಡಿದ್ದೆ ಕಣೋ.. " ಈ ಮಾತನ್ನು ಕೇಳಿದ ಅಪ್ಪ ಕಣ್ಣಲ್ಲಿ ನೀರು ತುಂಬಿಕೊಂಡದ್ದು ಮರೆಯಲಾಗದ ದೃಶ್ಯ ಎನಗೆ.

ಅದೇ ರೀತಿಯಲ್ಲಿ ಪ್ರಕಾಶ್ ಚಿಕ್ಕಪ್ಪ ಈ ಷಷ್ಠಿಪೂರ್ತಿ ಸಂಭ್ರಮದಲ್ಲಿ ಅವರ ಕಣ್ಣುಗಳು ತುಂಬಿಯೇ ಇದ್ದವು. ಒಂದು ಏಳು ಬೀಳಿನ ಜೀವನದ ಹಾದಿಯಲ್ಲಿ ಗೆಲುವಿನಷ್ಟೇ ಸೋಲನ್ನು ಉಂಡಿದ್ದರು, ಆ ಸೋಲು ಕಡೆಗೆ ತನ್ನ ಎದುರಿಗೆ ಸೋತಿದ್ದನ್ನು ನೋಡಿದ ಸುವರ್ಣ ಘಳಿಗೆ ಅದು.

"ಒಂದು ಬೆಚ್ಚನೆ ಗೂಡಿರಲು.. " ಇದು ಸರ್ವಜ್ಞನ ವಚನ.. ಇದನ್ನು ಅಕ್ಷರಶಃ ತಮ್ಮ ಜೀವನದಲ್ಲಿ ಕಂಡ ಚಿಕ್ಕಪ್ಪ ಆ ಸಂಭ್ರಮದ ಘಳಿಗೆಯಲ್ಲಿ ಸಂತಸದಿಂದ ಆನಂದಭಾಷ್ಪ ಹರಿಯುತ್ತಲೇ ಇತ್ತು.

ಮಂತ್ರಘೋಷಗಳ ನಡುವೆ, ಮಾಂಗಲ್ಯಧಾರಣೆ, ಹಿರಿಯರ ಆಶೀರ್ವಾದ, ಇದಕ್ಕೂ ಮುನ್ನ ಗಂಗಾಜಲದಿಂದ ಮಂತ್ರೋಕ್ತ ಜಳಕ.. ವಾಹ್ ಇಂತಹ ಭಾಗ್ಯ ಯಾರಿಗುಂಟು ಯಾರಿಗಿಲ್ಲ..

ಚಿಕ್ಕಪ್ಪ ಚಿಕ್ಕಮ್ಮ ನಿಮ್ಮ ಜೀವನದ ಸಾಧನೆಯ ಗೆಲುವಿನ ಮಜಲು ಇದು. ಈ ಸುಂದರ ಸಮಯದಲ್ಲಿ ನಮ್ಮೆಲ್ಲರ ಶಿರದ ಮೇಲೆ ನಿಮ್ಮ ಅಭಯಾಶೀರ್ವಾದ ಸದಾ ಇರಲಿ.. !

ಮಕ್ಕಳಾದ ನರಸಿಂಹ ಪ್ರಸಾದ್ ವಿನಯ್ ಭಾರದ್ವಾಜ್ ಮತ್ತು ಅವರ ಮನದನ್ನೆಯರಾದ ರಮ್ಯಾ ಮತ್ತು ತೇಜಸ್ವಿನಿ ಅವರ ಶ್ರಮ ಈ ಸಮಾರಂಭದಲ್ಲಿ ಎದ್ದು ಕಾಣುತ್ತಿತ್ತು. ಪ್ರತಿಯೊಂದರಲ್ಲಿಯೂ ಅಚ್ಚಕಟ್ಟು, ಬಂದವರನ್ನು ಗಮನಿಸಿಕೊಳ್ಳುವ ರೀತಿ ಸುಂದರವಾಗಿತ್ತು. ಸುಸಜ್ಜಿತವಾದ ಕಾರ್ಯಕ್ರಮದ ರೂಪುರೇಷೆ ಅಚ್ಚುಕಟ್ಟಾಗಿ ಇದ್ದುದ್ದರಿಂದ ಈ ಕಾರ್ಯಕ್ರಮ ಹೂವಿನ ಸರದಂತೆ ಘಮ ಘಮಿಸಿದ್ದು ಸುಳ್ಳಲ್ಲ.

ಚಿಕ್ಕಪ್ಪ ನಿಮಗೆ ೬೦ ವಸಂತಗಳು ತುಂಬಿದ ಜನುಮದಿನಕ್ಕೆ ಶುಭಾಶಯಗಳನ್ನು ಕೋರುತ್ತಾ, ಷಷ್ಠಿಪೂರ್ತಿ ಶಾಂತಿಯಲ್ಲಿ ಮಿಂದು ತೇಲುತ್ತಿರುವ ನಿಮ್ಮ ಕುಟುಂಬಕ್ಕೆ ನಮ್ಮೆಲ್ಲರ ಕಡೆಯಿಂದ ಹಾರ್ಧಿಕ ಅಭಿನಂದನೆಗಳು.


ಈ ಶುಭಸಂದರ್ಭದಲ್ಲಿ ಸತತ ೨೫ ವರ್ಷಗಳಿಂದ ತಾವು ಅನುಭವಿಸಿದ್ದು, ಓದಿದ್ದು, ಕೇಳಿದ್ದು, ಪ್ರವಚನ ಮಾಡಿದ್ದು ಎಲ್ಲವೂ ಒಂದು ಚಿಕ್ಕಪ್ಪನ ಬಾಳಿನಲ್ಲಿ ಪಾತ್ರವಾಗಿ.. ಅದು ಪತ್ರದ ರೂಪ ತಾಳಿ ಓದುಗರನ್ನು ತಲುಪುತ್ತಿತ್ತು. ೨೦೧೫ ರಲ್ಲಿ ಹಂಸ ಅಂಚೆಯಾಗಿ ಓದುಗರ ಮನೆ ಮನಸ್ಸು ಮುಟ್ಟಿದ್ದ ಆ ಲೇಖನಗಳು ಭೋಜ ಪತ್ರೆಯ ಹಾಗೆ ಕಾಗದದ ಮೇಲೆ ಮುದ್ರಣಗೊಂಡು ಹೊತ್ತಿಗೆಯಾದ ಸಂಭ್ರಮವೂ ಸೇರಿದ್ದು ಸಿಹಿಯಾದ ಪಾಯಸಕ್ಕೆ ದ್ರಾಕ್ಷಿ ಗೋಡಂಬಿಯಂತೆ ಸೇರಿತ್ತು.


ಇಂತಹ ತಂದೆ ತಾಯಿಯರನ್ನು ಪಡೆಯಲು ಮಕ್ಕಳು ಪುಣ್ಯ ಮಾಡಿರಬೇಕು
ಇಂತಹ ಮಕ್ಕಳನ್ನು ಪಡೆಯೋಕೆ ತಂದೆ ತಾಯಿಯರು ಪುಣ್ಯ ಮಾಡಿರಬೇಕು..
ಇಂತಹ ಸಮಾರಂಭದಲ್ಲಿ ಪಾಲ್ಗೊಳ್ಳಲು ನಾವು ಪುಣ್ಯಮಾಡಿರಬೇಕು..
ಸಪ್ತರ್ಷಿ ಮಂಡಲದಂತೆ ಎಲ್ಲವೂ ಪೂರ್ವನಿಯೋಜಿತವಾಗಿದ್ದಂತೆ ಭಾಸವಾಯಿತು.


ಗುರುನಾಥರ ಒಂದು ಅಮರವಾಣಿ ನೆನಪಿಗೆ ಬಂತು "ಇದು ನೀ ಇತ್ತ ಮಹೂರ್ತವಲ್ಲ.. ಆ ದೇವನಿತ್ತ ಮತ್ತು ದೇವನಿಟ್ಟ ಮಹೂರ್ತಕ್ಕೆ ನೀ ಹೆಜ್ಜೆ ಹಾಕಿದ್ದೀಯಾ"



ಈ ಮೇಲೀನ  ಮಾತುಗಳು ಎಷ್ಟು ನಿಜ ಅಲ್ಲವೇ .. ಜೀವನವೆಂಬ ನದಿಯ ಜಾಡು ಹಿಡಿದು ಜ್ಞಾನವೆಂಬ ಕಡಲನ್ನು ಸೇರುವ ತವಕ ಎಲ್ಲರಿಗೂ ಇರುತ್ತೆ ಅಲ್ಲವೇ.. !!!