Thursday, May 7, 2015

DFR - ಉತ್ಸಾಹ ಉಲ್ಲಾಸದ ಕೇಂದ್ರ ಬಿಂಧು!!

ಯಾಕೋ ಬೆಳಿಗ್ಗೆ ಬೆಳಿಗ್ಗೆ ರೇಡಿಯೋ ಕೇಳೋಣ ಎನ್ನಿಸಿತು.

ನಾನು ಇದು... ನೀವು ಕೇಳ್ತಾ ಇರೋದು ಇದು.. ಎನ್ನುವ ಸತ್ವ ರಹಿತ ಮಾತುಗಳಿಗಿಂತ ಬೇರೆ ಏನಾದರೂ ಸರಳವಾಗಿ ಬರುವ ಕಾರ್ಯಕ್ರಮಗಳನ್ನು ಕೇಳ ಬೇಕು ಎನಿಸಿತು.

ಡಂಬಾಚಾರ, ಚಮಕ್, ಧಮಕ್ ಏನೂ ಇಲ್ಲದ ಎಫ್ ಎಂ ಕಾಮನಬಿಲ್ಲು, ದೂರದರ್ಶನದ ಚಂದನ ಕಾರ್ಯಕ್ರಮಗಳು ನನಗೆ ಬಲು ಇಷ್ಟ. ಇಡಿ ದಿನ ತಾವು ನಂಬಿದ ಕೆಲವು ಸಿದ್ಧಾಂತಗಳನ್ನು ಮುಂದೆ ಇಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತಾರೆ ಆ ವಾಹಿನಿಗಳಲ್ಲಿ.

ಸರಿ.. ಕಾಮನಬಿಲ್ಲು ಎಫ್ ಎಂ ಕೆ ಕಿವಿ ಹಿಂಡಿದೆ.. ಮೊದಲೇ ಅಣ್ಣಾವ್ರ ಮೇಲೆ ಅಪರಿಮಿತ ಪ್ರೀತಿ, ಪ್ರೇಮ, ಅಭಿಮಾನ ತುಂಬಿರುವ ನನಗೆ... ಅಣ್ಣಾವ್ರ ಧ್ವನಿಯಲ್ಲಿ ಹಾಡುಗಳು ಭಿತ್ತರಗೊಳ್ಳುತ್ತಿದ್ದವು.

"ಹಾಡು ಕೋಗಿಲೆ ನಲಿದಾಡು ಕೋಗಿಲೆ..  ಬೆಳದಿಂಗಳ ಮಳೆಯಲ್ಲಿ ನಡೆವ ಹಾಗೆ ನನ್ನಲ್ಲಿ.. ಏನೋ ಮಧುರ ಭಾವನೆ.. ಏನೋ ಕಂಡ ಕಲ್ಪನೆ... "

"ಗುರುವಾರ ಬಂತಮ್ಮ ರಾಯರ ನೆನೆಯಮ್ಮ... ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ.. "

"ಹಾಲಲ್ಲಾದರೂ ಹಾಕು.. ನೀರಲ್ಲಾದರೂ ಹಾಕು.. ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಹಾಯಾಗಿರುವೆ"

"ಕರ ಮುಗಿವೆ ಗುರುರಾಯ ನೀ ಹರಸಬೇಕು.. ವರವೊಂದ ಬೇಡುವೆನು ನೀಡಲೇ ಬೇಕು"

ಹೀಗೆ ಸಾಲು ಸಾಲಾಗಿ ಹಾಡುಗಳು ಬರುತ್ತಲೇ ಹೋದವು.. ಆ ಹೊತ್ತಿನಲ್ಲಿ ಮೂಡಿದ ಲೇಖನ ಇದು.

ಈ ಹಾಡುಗಳಲ್ಲಿ ಬರುವ ರಾಘವೇಂದ್ರ, ಹನುಮ, ಕೃತಜ್ಞತಾ ಭಾವ, ಪರಿಸ್ಥಿತಿಗೆ ತಮ್ಮನ್ನು ಅರ್ಪಿಸಿಕೊಳ್ಳುವುದು, ನಸು ನಗುತ್ತಾ ಬದುಕ ಬಂಡಿಯಲ್ಲಿ ಸಾಗುವುದು.. ಒಂದು ತಾಳ್ಮೆಯ ಮನೋಭಾವ, ನಾನು ಎಂಬ ಅಹಂ ಇಲ್ಲದೆ ನಾವು ಎನ್ನುವ ಉಧಾತ್ತ ಭಾವ ಎಲ್ಲವೂ ಈ ಹಾಡುಗಳಲ್ಲಿ ತುಂಬಿ ತುಳುಕುತ್ತಿತ್ತು. ಈ ಹಾಡುಗಳನ್ನು ಹಾಡಿದ ಅಣ್ಣಾವ್ರು ಕೂಡ ಹಾಗೆ ಜೀವನದಲ್ಲಿ ಸಾಧನೆಯ ಶಿಖರ ಏರಿದ್ದರೂ ನೀವೇ ನೀವೇ ನನಗೆ ಅನ್ನದಾತರು.. ನೀವೇ ನನಗೆ ಅಭಿಮಾನಿ ದೇವರುಗಳು ಎನ್ನುವ ಭಾವ ಹೊಂದಿದ್ದವರು.

ಹೀಗೆ ನಮ್ಮ ನಡುವೆ ಇರುವ ಸರಳ ವಿರಳ ಜೀವಿ DFR..

ಕಾದ ಕಬ್ಬಿಣದ ಸರಳುಗಳೇ ಪಕ್ಕದಲ್ಲಿ ಹಾಯುತ್ತಾ ಹೋದರೂ.. ಅದೇ ನಗು.. ಅದೇ ತಾಳ್ಮೆಯ ಮಾತುಗಳು, ನಿಧಾನವಾಗಿ ಹರಿದು ಹರಿದು  ಬರುವ ನುಡಿಮುತ್ತುಗಳು..

ಕೈಯಲ್ಲಿ ಕಟ್ಟಿದ ಗಡಿಯಾರ ಗರ ಗರ ತಿರುಗುತ್ತದೆ ನಮ್ಮ ಕೈಯಲ್ಲಿದ್ದರೆ.. ಆದರೆ ಇವರ ಕೈಯಲ್ಲಿ ಇರುವ ಗಡಿಯಾರಕ್ಕೆ ಇವರ ಮೇಲೆ ಅದೇನೋ ವಿಪರೀತ ಮಮತೆ.. ನನಗೆ ಅನುಮಾನ ಬಂದಿತ್ತು ಒಮ್ಮೆ.. ಅದಕ್ಕೆ ಕೇಳಿದ್ದೆ "ನಿಮ್ಮ ಗಡಿಯಾರದಲ್ಲಿ ಹನ್ನೆರೆಡು ಸಂಖ್ಯೆಗಳು ಮಾತ್ರವೇ ಇರೋದು ಅಥವಾ ಹೆಚ್ಚಿವೆಯೇ ಎಂದು....
ಒಮ್ಮೆ ನಿಮ್ಮಲ್ಲಿರುವ ಕೈ ಗಡಿಯಾರ ನನಗೆ ಕೊಡಿ.. ಸಮಯಪಾಲನೆ, ಸಮಯೋಚಿತ ಪಾಲನೆ ಕಲಿಯಬೇಕು ಎಂದು ಹೇಳಿದ್ದೆ.. ಇವೆಲ್ಲಾ ಉತ್ಪ್ರೇಕ್ಷೆ ಎನಿಸಬಹುದು ಆದರೆ ದಿನದ ಇಪ್ಪತ್ತನಾಲ್ಕು ಘಂಟೆಗಳನ್ನು ಹೇಗೆ ಉಪಯೋಗಿಸಬೇಕು ಎನ್ನುವುದನ್ನು ಖಂಡಿತ ಇವರಿಂದ ಕಲಿಯಬೇಕು ನಾನು.

ಬರೆಯುತ್ತಾರೆ, ಓದುತ್ತಾರೆ, ಕಚೇರಿಯ ಒತ್ತಡ ಕೆಲಸದಲ್ಲೂ ಇವರ ಚಟುವಟಿಕೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಕಿರಿಯರ ಜೊತೆಯಲ್ಲಿ ಕಿರಿಯಯವರಾಗಿ, ಅವರಿಂದ ಕಲಿಯುವ ಗುಣ ಒಂದು ಕಡೆಯಾದರೆ , ಹಿರಿಯರ ಜೊತೆಯಲ್ಲಿ ಕಿರಿಯವರಾಗಿ, ಹಿರಿಯರ ಮಾರ್ಗದರ್ಶನ ಪಡೆವ ಮನೋಭಾವ ಒಂದು ಕಡೆ.. ಇಂಥಹ ಅದ್ಭುತ ಗುಣಗಳ ಸಾಗರ ನಮ್ಮ DFR..

ಇದೆಲ್ಲಾ ಹೇಗೆ ಸಾಧ್ಯ ಎಂದರೆ.. ಅಣ್ಣಾವ್ರ ಪ್ರೇಮದ ಕಾಣಿಕೆ ಹಾಡಿನಂತೆ "ಅದೇನೆ ಬಂದರೂ…. ಅವನ ಕಾಣಿಕೆ" ಎಂದು ಹೇಳುತ್ತಾ ಈ ಕೆಳಗಿನ ಚಿತ್ರದಂತೆ ನಿಂತು ಬಿಡುತ್ತಾರೆ..


ಈ ಲೇಖನ ಓದಿದ ಮೇಲೆ ನನಗೆ ಬಯ್ತಾರೆ, ಕೋಪಮಾಡಿಕೊಳ್ಳುತ್ತಾರೆ... ಸ್ವಲ್ಪ ದಿನ ಸದ್ದಿಲ್ಲದೇ ಇರುತ್ತಾರೆ.. ಹೌದು ನಿಜ.. ಆದರೆ ಕಾಳಿದಾಸ ಕಂಡು ಆರಾಧಿಸಿದ ಕಾಳಿಮಾತೆಯ ಭಕ್ತನಂತೆ ನಾ ಅವರಿಗೆ ಈ ಹುಟ್ಟು ಹಬ್ಬದ ಸಡಗರ ತುಂಬಿದ ಕ್ಷಣಗಳನ್ನು ಅವರಿಗಾಗಿ ಆ ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ.

ಹುಟ್ಟು ಹಬ್ಬದ ಶುಭಾಶಯಗಳು DFR.. ನೀವೊಂದು ಸ್ಪೂರ್ತಿಯ ಕೇಂದ್ರ ಬಿಂಧು.. ಸ್ಪೂರ್ತಿಯ ಸೆಲೆ.. ಸ್ಪೂರ್ತಿಯ ನೆಲೆ..
ಅದಕ್ಕಾಗಿ ಈ ಒಂದು ಪುಟ್ಟ ಲೇಖನ ನಿಮ್ಮ ಜನುಮದಿನಕ್ಕಾಗಿ.. !!!