Monday, May 19, 2014

ಕರಿಮಣಿ...ರಿಮಣಿ.. ಮಣಿಕಾಂತ.. ಸಾಧನೆಯ ಗಣಿ !!!.

ಚಿನ್ನ ಬೆಳ್ಳಿ ಎಂಬ ಲೋಹಗಳು ಬರಿ ಲೋಹಗಳಾಗಿದ್ದಾಗ.. ಮದುವೆಯಾದ ಹೆಣ್ಣು ಮಕ್ಕಳು ಕರಿಮಣಿ.. ರಸಗುಂಡು.. ಮಾಂಗಲ್ಯ ಇವನ್ನೆಲ್ಲ ಅರಿಶಿನದಲ್ಲಿ ಅದ್ದಿದ ದಾರದಲ್ಲಿ ಪೋಣಿಸಿ ಅದನ್ನು ಧರಿಸಿದಾಗ ಅವರ ಮೊಗದಲ್ಲಿ ಬೆಳಗುತಿದ್ದ ಆನಂದ..

ಆಹಾ ಆಹಾ ಅದನ್ನು ವರ್ಣಿಸಲು ವರ್ಣಮಾಲೆಯು ಸೋಲೊಪ್ಪಿಕೊಳ್ಳುತ್ತದೆ!!!

ಈ ಲೋಕದಲ್ಲಿ ಈ ಕಲಿಯುವ ಯುಗದಲ್ಲಿ ಸರ್ವಜ್ಣನೆ ಹೇಳಿದ ಹಾಗೆ ಬಲ್ಲವರಿಂದ ಕಲಿತು ವಿದ್ಯೆ ಎಂಬಾ ಮಹಾಪರ್ವತದಲ್ಲಿ ಕೂತೆ ಎನ್ನುವಂತೆ ಸುತ್ತ ಮುತ್ತಲು ಕಾಣುವ ಕತ್ತಲಲ್ಲಿ ಬೆಳಕನ್ನು ಹುಡುಕಿ ಆ ಬೆಳಕಿನ ದೀಪವನ್ನು ಹತ್ತಾರು ಮಾನಸ ಲೋಕಕ್ಕೆ ಒಯ್ಯುವ ತಾಕತ್ ಎಲ್ಲರಲ್ಲೂ ಇರುತ್ತ್ತದೆ.. ಅದನ್ನು ಅಳವಡಿಸಿ ಬೆಳೆಸಿಕೊಳ್ಳಬೇಕು..

ಬೆಳದಿಂಗಳ ಬಾಲೆ ಚಿತ್ರದಲ್ಲಿ ಅನಂತ್ ನಾಗ್ ಹೇಳುತ್ತಾರೆ ಮಾನವ ನಾಲ್ಕು ಹಂತದಲ್ಲಿ ಬೆಳೆಯುತ್ತಾನೆ..

ನಾ ಚೆನ್ನಾಗಿಲ್ಲ ಪ್ರಪಂಚ ಚೆನ್ನಾಗಿಲ್ಲ
ನಾ ಚೆನ್ನಾಗಿಲ್ಲ ಪ್ರಪಂಚ ಚೆನ್ನಾಗಿದೆ
ನಾ ಚೆನ್ನಾಗಿದ್ದೇನೆ ಪ್ರಪಂಚ ಚೆನ್ನಾಗಿಲ್ಲ
ನಾನು ಚೆನ್ನಾಗಿದ್ದೇನೆ ಪ್ರಪಂಚವೂ ಚೆನ್ನಾಗಿದೆ

ನಿಜವಾಗಿಯೂ ಈ ಮಾತುಗಳು ನನ್ನನ್ನೂ  ತುಂಬಾ ಕಾಡುತ್ತವೆ..

ಏನೋ ಶ್ರೀ ಇದು.. ಈ ಪಾಟಿ ಗರಗಸ ಅಂದುಕೊಂಡ್ರಾ.. ಇರಿ ಇರಿ ವಿಷಯ ಇದೆ..

****
ವಸುದೇವನಿಗೆ ಅಶರೀರವಾಣಿ ನುಡಿಯುತ್ತದೆ.. "ವತ್ಸ.. ಈಗ ಜನಿಸುವ ಮಗುವನ್ನು ಯಶೋದೆ ಬಳಿಗೆ ಬಿಡು.. ಅಲ್ಲಿಯೇ ಬೆಳೆಯಲಿ.. .. ಈ ಕೆಲಸ ಈ ಕ್ಷಣ ಆಗಬೇಕು"

ಸರಿ.. ವಸುದೇವನಿಗೆ ಅಶರೀರವಾಣಿ ಒಂದು ಘಂಟಾ ನಾದವಾಯಿತು.. ಸರಿ ಮಗುವನ್ನು ಹೊತ್ತು ನಡೆದೆ ಬಿಟ್ಟಾ..

ಜೋರಾದ ಮಳೆ.. ಘರ್ಜನೆ ಮಾಡುತ್ತಿದ್ದ ಮೋಡಗಳು, ಪೃಥ್ವಿಗೆ ಬರಿ ಸೂರ್ಯನಲ್ಲ ಬೆಳಕು ಕೊಡೋದು ನಾನು ಕೂಡ ಅನ್ನುವಂತೆ ಮಿಂಚು ಅವಾಗವಾಗ ತನ್ನ ಇರುವನ್ನು ತೋರಿಸುತ್ತಿತ್ತು...

ಗಕ್ಕನೆ ನಿಂತ ವಸುದೇವ.. ಕಾರಣ ಸೊಕ್ಕಿ ಉಕ್ಕಿ ಹರಿಯುತ್ತಿದ್ದ ಯಮುನೆ ತುಂಬಿ ಹರಿಯುತ್ತಿದ್ದಳು.. ವಸುದೇವ ಪ್ರಾರ್ಥಿಸಲಿಲ್ಲ ಆದರೆ ಲೋಕ ಕಲ್ಯಾಣಕ್ಕೆ ಅವತಾರ ಪುರುಷನ ಜನನವಾಗಿತ್ತು.. ಅಲ್ಲಿ ರೇ.. ಇಲ್ಲಾ ಎನ್ನುವ ಪದಗಳಿಗೆ ಅವಕಾಶವೇ ಇರಲಿಲ್ಲ..
ಯಮುನೆ ಹೆಣ್ಣು ಮಕ್ಕಳ ಬೈ ತಲೆಯಂತೆ ದಾರಿ ಮಾಡಿಕೊಟ್ಟಳು.. ಉಕ್ಕಿ ಹರಿಯುತ್ತಿದ್ದ ಯಮುನೆಯ ಮಧ್ಯೆ ನಿಧಾನವಾಗಿ ಹೆಜ್ಜೆ ಇಡುತ್ತಾ ಸಾಗಿದ.. ತಲೆಯ ಮೇಲೆ ಸೂರಾಗಿ ಆದಿ ಶೇಷನೆ ಬರುತ್ತಿದ್ದ.. !!

ಗೋಕುಲಕ್ಕೆ ಬಂದು.. ನಂದನ ಮನೆಯಲ್ಲಿ ಯಶೋದೆಯನ್ನು ಹುಡುಕಲು ಶುರು ಮಾಡಿದ.. ಯಶೋದೆ ಇಲ್ಲಾ..

ವಸುದೇವನಿಗೆ ಗಾಬರಿ.. ಅಯ್ಯೋ ಈಗ ಏನು ಮಾಡುವುದು ಎಂದು

ಮತ್ತೆ ಅಶರೀರವಾಣಿ "ವತ್ಸ ಗಾಬರಿ ಬೇಡ.. ಲೋಕಕಲ್ಯಾಣಕ್ಕೆ ಅವತಾರ ಎತ್ತಿರುವ ಈ ಮಹಾಪುರುಷ ಹೊಣೆ ನನ್ನದು.. ಯಶೋದೆ ಮಮತಾಮಯಿ .. ಸುಖ ನಿದ್ರೆಯಲ್ಲಿ ಇದ್ದಾಳೆ .. ನೀನು ಆ ಮಗುವನ್ನು ಇಲ್ಲಿಯೇ ಬಿಡು. ಸ್ವಲ್ಪ ಹೊತ್ತು ವಿರಮಿಸಿಕೋ.. ನಂತರ ನೀನು ಮಥುರಕ್ಕೆ ಹೊರಡಬಹುದು... ಇದರ ಮಧ್ಯೆ ಈ ಪುಸ್ತಕವನ್ನು ಓದು.. ಆಯಾಸ ಕಡಿಮೆ ಆಗುತ್ತದೆ...

ಅಲ್ಲಿ ಇಲ್ಲಿ ನೋಡಿದ ಮೇಲೆ.. ಅಲ್ಲಿ ಕೆಲವು ಪುಟಗಳು ಕಾಣಿಸಿದವು .

ಮೊದಲ ನೌಕೆ.
ಬಂಧುಗಳು..  ಮಿತ್ರರು.. ಸಹೃದಯ ಓದುಗರು..ಸಿನೆಮಾಸಕ್ತರು.. ಸಾಹಿತ್ಯ ಅಭಿರುಚಿಯುಳ್ಳವರು.. ತಮ್ಮೊಳಗೆ ಒಂದು ಪ್ರಪಂಚವನ್ನು ತೆರೆದಿಡುವ ಬ್ಲಾಗ್  ಮಿತ್ರರು ಹೆಜ್ಜೆ ಇಡುತ್ತಾ ಬೆಂದಕಾಳೂರಿನ ಜೆ. ಸಿ ರಸ್ತೆಯಲ್ಲಿನ ರವಿಂದ್ರ ಕಲಾಕ್ಷೇತ್ರಕ್ಕೆ ದಾಂಗುಡಿ ಇಡುತ್ತಿದ್ದರು.. ನಕ್ಕು ನಲಿಯುವ ಮಾತುಗಳು, ಬಹಳ ದಿನಗಳಾದ ಮೇಲೆ ಭೇಟಿ ಮಾಡುವ ಗೆಳೆಯರು.. ಇವರ ಕಲರವಕ್ಕೆ ಕಲಾಕ್ಷೇತ್ರ ಸಾಕ್ಷಿಯಾಗಿತ್ತು.. ಸುಂದರ ವಧುವಂತೆ ಸಜ್ಜಾಗಿತ್ತು ಕಲಾಕ್ಷೇತ್ರ.. !

ಎರಡನೇ ದೋಣಿ 
ವೇದಿಕೆ ಸಜ್ಜಾಗಿತ್ತು.. ಮುದ್ದು ಪುಟಾಣಿಗಳಿಬ್ಬರು ಕೆಲ ನಿಮಿಷಗಳ ಕಾಲ ಎಲ್ಲರನ್ನು ನಿಬ್ಬೆರಗು ಗೊಳಿಸಿ ಮಾಡಿದ ನೃತ್ಯ ಆಹಾ ವರ್ಣಿಸಲು ಎರಡು ಮಾತಿಲ್ಲ.. ಇಡಿ ಕಾರ್ಯಕ್ರಮದ ಕೇಂದ್ರ ಬಿಂಧುವಿನ ಕುಡಿ ಆ ಎರಡು ಪುಟಾಣಿಗಳಲ್ಲಿ ಒಂದಾಗಿತ್ತು.
ಅಂಗೀಕ ಅಭಿನಯ,, ಆ ಮುದ್ರೆಗಳು, ಹಾವ ಭಾವ, ತಾಳಕ್ಕೆ ತಕ್ಕಂತೆ ಇಡುತ್ತಿದ್ದ ನೃತ್ಯದ ಮತ್ತುಗಳು ಆಹಾ.. ಸೂಪರ್ ಸೂಪರ್ ಅನ್ನಿಸುವಂತೆ ಮಾಡಿದ್ದವು.

ಮೂರನೇ ಹಾಯಿ ದೋಣಿ
ನೆರೆದಿದ್ದ ಸಹೃದಯ ಮಿತ್ರರಿಗೆ ಬರಿ ಉಪಚಾರ ಮಾತ್ರವಲ್ಲ ಉಪಹಾರವೂ ಇತ್ತು.. ಉಪಹಾರ ನಾಲಿಗೆಯನ್ನು ತಣಿಸಿದರೆ ಸೊಗಸಾದ ಉಪಾಸನ ಮೋಹನ್ ತಂಡದಿಂದ ಕಿವಿಗಳಿಗೆ ರಸದೌತಣ ಒದಗಿಸಿತು. ಪುಂಕಾನುಪುಂಕವಾಗಿ ಅರಳಿದ ಗೀತೆಗಳು ಒಂದಕ್ಕಿಂತ ಒಂದು ಮಧುರ ಅಮರ. ಮನತುಂಬಿ ಹಾಡಿದಾಗ ಕರ್ಣವೂ ಕೂಡ ಕಿವಿ ತುಂಬಿ ಕೇಳುತ್ತದೆ ಎನ್ನುತ್ತಾರೆ.. ಆ ಮಾತು ನಿಜವೆಂಬ ಅರಿವಾಯಿತು.

ಹುಟ್ಟು ಹಾಕುತ್ತಾ ಸಾಗಿದ ಯಾನ
ಅಲ್ಲಿದ್ದವರಿಗೆಲ್ಲಾ ಎರಡು ಯೋಚನೆ.. ಒಂದು "ನಮೋ" ದೇಶವನ್ನು ಹೇಗೆ ಮುನ್ನೆಡೆಸುತ್ತಾರೆ.. ಎರಡನೆಯದು ತೀರದ ಭಾವ ಯಾನ ಯಾವಾಗ ಅನಾವರಣಗೊಳ್ಳಲಿದೆ..

ಯೋಚನೆಯೇ ಬೇಡ.. ಮೊದಲನೆಯದು ನಡೆಯಲು ನಂಬಿಕೆ ವಿಶ್ವಾಸಗಳು ಬೇಕು.. ಎರಡನೆಯದನ್ನು ಅನುಭವಿಸಲು ಭಾವುಕ ಮನಸ್ಸು ಇರಬೇಕು.  ಅದು ಶತಃಸಿದ್ಧವಾಗಿತ್ತು. ಕಾರಣ ಅಲ್ಲಿದ್ದವರೆಲ್ಲ ಸುಂದರ ಮನದ ಸುಮಧುರ ಕುಸುಮಗಳು.
ಪ್ರಖ್ಯಾತ ತಾರೆ ಶ್ರೀ ಪ್ರಕಾಶ್ ರೈ ಜ್ಯೋತಿ ಬೆಳಗಿದರು.. ಅವರ ಜೊತೆಯಲ್ಲಿ ಹೆಸರಾದ ನಿರ್ದೇಶಕ ಶ್ರೀ ಯೋಗರಾಜ್ ಭಟ್, ತಮ್ಮ ಸುಂದರ ಉಡುಗೆ ತೊಡುಗೆಗೆ ಹೆಸರಾದ ಶ್ರೀ ವಿಶ್ವೇಶರ ಭಟ್.. ಇವರೆಲ್ಲ ಒಬ್ಬರಾದ ಮೇಲೆ ಒಬ್ಬರು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಶುರು ಮಾಡಿದರು.

ಅಂತಃಕರಣದ ಅಲೆಗಳ ಮೇಲೆ ಯಾನ 
ತಾನು ಬೆಳಕಿಗೆ ಬಂದರೆ ಸಾಕು ಅನ್ನದೆ ಬೆಳಕಲ್ಲಿದ್ದು ಬೆಳಕಿಗೆ ಬರಲು ಯೋಚಿಸದ ಹಲವಾರು ಸಾಧಕರನ್ನು ತಮ್ಮ ಅಕ್ಷರಗಳ ಲೋಕದಿಂದ ಪರಿಚಯಿಸುತ್ತಾ ಅವರ ಸಾಧನೆಗಳ ಪಕ್ಷಿನೋಟ ಕೊಡುತ್ತಾ, ಅವರನ್ನು ವೇದಿಕೆಗೆ ಬರಮಾಡಿಕೊಂಡು ನಾಲ್ಕು ಜನರ ಮಧ್ಯೆದಲ್ಲಿ ನಿಲಿಸಿ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಅವರನ್ನು ಗೌರವಿಸಿ ಕಿರುಕಾಣಿಕೆ ನೀಡಿದ್ದು ಸ್ವಾಗತಾರ್ಹ ಕಾರ್ಯಕ್ರಮ.

ಆ ಸಾಧಕರ ಪರಿಶ್ರಮ, ಅವರ ಧೃಡ ಮನಸ್ಸು, ನಾ ಇದ್ದರೇ ನಿಮ್ಮೆಲ್ಲರನ್ನು ಗುರಿ ತಲುಪಿಸುತ್ತೇನೆ ಎನ್ನುವಂಥಹ ಗಟ್ಟಿ ಧ್ಯೇಯ ಇವುಗಳ ಸಮಾಗಮವೇ ಶ್ರೀ ಮೆಡಿಸಿನ್ ಬಾಬ, ಐ ಕ್ಯಾನ್ ಜೀವಿ, ಹೀಗೆ ಹಲವಾರು ಸಾಧಕರನ್ನು ರಂಗದ ಮೇಲೆ ನಿಲ್ಲಿಸಿದ್ದು ಶ್ಲಾಘನೀಯ ಶ್ರಮ.

ನಾ ಗೆದ್ದರೆ ಗೆಲುವು ನನದು ಎನ್ನುವ ಈ ಲೋಕದಲ್ಲಿ ನಾ ಗೆದ್ದಿದ್ದರೆ ಆ ಗೆಲುವು ನನದಲ್ಲ ನಿಮದು ನನ್ನ ಕುಟುಂಬದ್ದು ನನ್ನ ಬಂಧು ಮಿತ್ರರದ್ದು ಎನ್ನುತ್ತಾ ತಮ್ಮ ಗೆಲುವಿನ ಲೋಕದಲ್ಲಿ ಜೊತೆಯಲ್ಲಿ ನೆರಳಾಗಿ ನಿಂತ ಎಲ್ಲರನ್ನೂ ಪರಿಚಯಿಸಿ ಅಭಿನಂದಿಸಿದ್ದು ಸೂಪರ್ ಸೂಪರ್ ಎನ್ನುವಂತೆ ಮಾಡಿತ್ತು.

ತಂದೆ ತಾಯಿ, ಗುರುಗಳು, ಸುಮಧುರ ಮನಸ್ಸಿನ ಕವಿಗಳು, ದಾರಿ ತೋರಿದವರು, ದಾರಿ ಹಾಕಿ ಕೊಟ್ಟವರು, ದಾರಿ ಮಾಡಿಕೊಟ್ಟವರು ಎಲ್ಲರನ್ನು ಸ್ಮರಿಸುತ್ತಾ ಅವರಿಗೆ ಕಿರುಕಾಣಿಕೆ ಸಲ್ಲಿಸಿದ್ದು ಇಡಿ ಕಾರ್ಯಕ್ರಮದ ವಿಶೇಷ.

ವಸುದೇವನ ಆ ಚಿಕ್ಕ ಚಿಕ್ಕ ಪತ್ರಗಳನ್ನು ಓದಿದ ಮೇಲೆ ಸುಸ್ತು ಆಯಾಸ ಎಲ್ಲವೂ ಹೂವಿನ ಹಾಗೆ ಹಗುರಾಗಿತ್ತು.. ಅರೆ ಇದೇನಿದು ಈ ರೀತಿಯ ಕಾರ್ಯಕ್ರಮವೂ ಇರುವುದೇ.. ಲೋಕ ಕಲ್ಯಾಣಕ್ಕೆ ಅವತಾರವೆತ್ತಿರುವ ಈ ಪುಣ್ಯ ಪುರುಷನ ಸನ್ನಿಧಾನದಲ್ಲಿ ಈ ರೀತಿಯ ಸುಂದರ ವಿವರ..
ಅವನ ಮನಸ್ಸು ಹಕ್ಕಿಯ ಹಾಗೆ ಹಾರಾಡತೊಡಗಿತು..

ಸರಿ ಅಲ್ಲಿಂದ ಹೊರಟ ವಾಸುದೇವ ಯಮುನೆ ಹತ್ತಿರ ಮತ್ತೆ ಬಂದಾಗ.. ಯಮುನೆ ಹೇಳಿದಳು ವಸುದೇವ ನಾ ನಿನಗೆ ದಾರಿ ಮಾಡಿಕೊಟ್ಟೆ ಎಂಬ ಅಹಂ ನನ್ನ ಕಾಡುತ್ತಿತ್ತು ಆದರೆ.. ಆ ಕಾರ್ಯಕ್ರಮದ ಬಗ್ಗೆ ನೀನು ಓದಿ.. ನಿನ್ನ ಮನದಲ್ಲಾಗುತ್ತಿರುವ ಅಲೆಗಳ ಯಾನ ನೋಡಿದಾಗ ಆಹಾ ಇಂತಹ ಸುಮಧುರ ಮನಗಳು ಸುರಿಸುವ ಆನಂದ ಭಾಷ್ಪದಿಂದ ನನ್ನ ಒಡಲು ತುಂಬಿ ಹರಿಯುತ್ತಿದೆ ಎನ್ನಿಸುತ್ತಿದೆ..

ಕಂದಾ ವಾಸುದೇವ.. ಇಂತಹ ಸುಂದರ ಹೂವಿನ ಮನಸ್ಸಿನ ಜೀವಿಯನ್ನು ನಾ ನಿನ್ನ ಮನದಲ್ಲಿ ಕಂಡಿದ್ದು ನನಗೆ ಬಲು ಸಂತಸವನ್ನು ಹೊತ್ತು ತಂದಿದೆ.. ಅವರ ಜನುಮದಿನಕ್ಕೆ ಈ ಲೇಖನ ಒಂದು ಸುಂದರ ಚೌಕಟ್ಟು ಎನ್ನುವುದು ಬಹಳ ಸುಂದರ ಅನುಭವ.

ಭಾವ ತೀರ ಯಾನದ ನಾವಿಕ ಮಣಿಕಾಂತ್ ಅವರ ಸುಂದರ ಪರಿಶ್ರಮ ಈ ಕಾರ್ಯಕ್ರಮದ ಪ್ರತಿ ಕ್ಷಣದಲ್ಲೂ ಮಾರ್ಧನಿಸುತ್ತಿತ್ತು ಅನ್ನಿಸುತ್ತಿದೆ.. ವತ್ಸ ಇವರ ಈ ಮನೋಜ್ಞ ಕಾರ್ಯ ಎಲ್ಲರನ್ನು ಎಲ್ಲವನ್ನೂ ತಲುಪಲಿ ಮತ್ತು ಅವರ ಈ ಸುಂದರ ಜನುಮದಿನ ಸದಾ ಆನಂದವನ್ನು ಹೊತ್ತು ಹೊತ್ತು ತರಲಿ ಎಂದು ಹಾರೈಸುತ್ತೇನೆ.

**********

ಇಡಿ ಕಾರ್ಯಕ್ರಮ ಒಂದು ಶಿಸ್ತಿನ ಕವಾಯತು ನಡೆದಂತೆ ನಡೆಯಿತು. ಮಾತಾಡಿದ ಪ್ರತಿ ಅತಿಥಿಗಳು, ತಮ್ಮ ಭಾವವನ್ನು ಹರವಿಕೊಂಡದ್ದು ಒಂದು ಉತ್ತಮ ಕಾರ್ಯಕ್ರಮ ಹೀಗೆ ಇರಬೇಕು ಎನ್ನಿಸುವಂತೆ ತೆರೆದಿಟ್ಟಿತು.

ಮಣಿಕಾಂತ್  ಸರ್ ನಿಮ್ಮ ನಿರ್ಮಲ ನೆಗೆ ಎಷ್ಟು ತೂಕಬದ್ಧವಾಗಿದೆಯೋ ಅಷ್ಟೇ ನಿಮ್ಮ ಹೂವಿನ ಮನಸ್ಸು ಕೂಡ.. ನಿಮ್ಮ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳು ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ಸಾಕ್ಷಿ. ಅಲ್ಲಿ ನಡೆದ ಪ್ರತಿಕ್ಷಣವನ್ನು ದಾಖಲಿಸಬೇಕು ಎಂಬ ಹಂಬಲ ನನ್ನದು. ಆದ್ರೆ ಚಿತ್ರಗಳು ಹೇಳುವ ಕಥೆ ಕೆಲವೊಮ್ಮೆ ಅಕ್ಷರಗಳು ಹೇಳಲಾರವು ಅನ್ನಿಸಿತು . ಹಾಗಾಗಿ ಇಡಿ ಕಾರ್ಯಕ್ರಮದ ತುಣುಕುಗಳನ್ನು ಚಿತ್ರಗಳನ್ನಾಗಿ ಇಲ್ಲಿಯೇ ಹರಡಿ ಬಿಟ್ಟಿದ್ದೇನೆ. .














ನಿಮ್ಮ ಜನುಮದಿನಕ್ಕೆ ನಿಮ್ಮದೇ ಸಮಾರಂಭದಲ್ಲಿ ಅನಾವರಣಗೊಂಡ ಭಾವ ತೀರ ಯಾನ ಎನ್ನುವ ಸುಂದರ ಹೊತ್ತಿಗೆಯಂತೆ  ಪ್ರತಿ ಪುಟವೂ ನವ ನವೀನ.. ಹಾಗೆಯೇ ನಿಮ್ಮ ಅತಿ ಅತಿ ಮಧುರಾತಿ ಮಧುರ ಮನಸ್ಸು ಈ ಕಾರ್ಯವನ್ನು ಇನ್ನಷ್ಟು ಘಮ ಗುಟ್ಟುವಂತೆ ಮಾಡಿದ್ದು ನಿಮ್ಮ ಹಾಗೂ ನಿಮ್ಮ ತಂಡದ ತಾಕತ್ತು.

ನಿಮಗೆ ಜನುಮದಿನ ಶುಭಾಶಯಗಳನ್ನು ಕೋರುತ್ತಾ ನೀವು ಕಂಡ ಕನಸ್ಸೆಲ್ಲಾ ನನಸಾಗಲಿ ನನಸೆಲ್ಲ ಸೊಗಸಾಗಿರಲಿ ಎಂದು ಆಶಿಸುವ ನಿಮ್ಮೆಲ್ಲರ ಅಭಿಮಾನಿಗಳು!!!

ಜನುಮದಿನದ ಶುಭಾಶಯಗಳು ಮಣಿಕಾಂತ್ ಸರ್ !!!

Wednesday, May 7, 2014

DFR - ನಿಮಗಿದೋ ..... !!!!

"ಭಾರತ ಭೂಶಿರ ಮಂದಿರ ಸುಂದರಿ ಭುವನ ಮನೋಹರಿ ಕನ್ಯಾಕುಮಾರಿ" ಈ ಹಾಡು ಉಪಾಸನೆ ಚಿತ್ರದ್ದು.. ಈ ಹಾಡಿನ ಸಾಹಿತ್ಯ, ಸಂಗೀತ, ಆರತಿ ತನ್ಮಯಳಾಗಿ ವೀಣೆ ನುಡಿಸುವ ನಟನೆ.. ಬೆಳಕಿನ ಸಂಯೋಜನೆ.. ಆಹಾ ಅತಿ ಸುಂದರ..

ಇಂತಹ ಒಂದು ತನ್ಮಯತೆಯನ್ನು ಮತ್ತೆ ಕಂಡಿದ್ದು.. ಅಣ್ಣಾವ್ರ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಕಾಳಿ ಮಾತೆಯನ್ನು ಕಂಡಾಗ ಅಣ್ಣಾವ್ರ ಮುಖದಲ್ಲಿನ ಆ ಅಭಿನಯ.. ತನಗಿಂತಲೂ ಕಿರಿಯಳಾದ ಮತ್ತು ಪರಭಾಷೆಯ ಚಿತ್ರದಲ್ಲಿ ಉತ್ತಮ ಪಾತ್ರಗಳಿಲ್ಲದೇ ಯಾವುದೋ ಯಾವುದೋ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತ ಇದ್ದ ನಳಿನಿಯಲ್ಲಿ ಕಾಳಿ ಮಾತೆಯನ್ನು ಕಂಡು ಅವಳ ಕಾಲನ್ನು ಮುಟ್ಟಿ ನಮಸ್ಕರಿಸುವುದು ಕಾಲ ಮೇಲೆಯೇ ತಲೆಯಿಟ್ಟು ಮಲಗುವುದು..

ಆಹಾ ಅಂಥಹ ನಟನೆ.. ಅಣ್ಣಾವ್ರಿಗೆ ಮಾತ್ರ ಸಾಧ್ಯ..

"ಮಾತೆ ಜಗನ್ಮಾತೆ ಸನ್ನಿಧಾನದಲ್ಲಿ ನಿಂತು ನಿನ್ನಿಂದ ವರ ಪಡೆದ ನನ್ನ ಮನಸ್ಸಿಗೆ ಸಂತೋಷ ತಂದ ಆ ಘಳಿಗೆ ಸುವರ್ಣ ಘಳಿಗೆ" ಎಂದರು ಕಾಳಿದಾಸ

ಕಾಳಿಮಾತೆ "ಹೌದು ಕಾಳಿದಾಸ ನಿನ್ನಂತಹ ಭಕ್ತರು ಇರುವಾಗ ನನ್ನ ಅಸ್ತಿತ್ವ ಇದ್ದೆ ಇರುತ್ತದೆ"

ಯಾಕೋ ಕ್ಷಣ ಕಾಲ ಕಾಳಿದಾಸ ಮೂಕನಾಗಿದ್ದರು..ಅದನ್ನು ಮನಗಂಡ ಮಾತೆ

"ಅರೆ ಮಗು ಏನಾಯಿತು.. ಯಾಕೆ ಸುಮ್ಮನಾದೆ.. ಮೌನಕ್ಕೆ ಶರಣಾದೆ.. ?"

"ಕಾಳಿಯೇ ನನ್ನ ಮುಂದೆ ನಿಂತಿರುವಾಗ.. ಈ ದಾಸನಿಗೆ ಮತ್ತೇನು ಚಿಂತೆ ಮಾತೆ.. ಆದರೆ ನನ್ನ ಮನಸ್ಸಿಗೆ ಒಂದು ಯೋಚನೆ
ತಲೆ ತಿನ್ನುತ್ತಿದೆ.. "

"ಅದೇನು ಕೇಳು ಮಗು.. ನಾನಿರುವೆ ನಿನ್ನ ಪ್ರಶ್ನೆಗಳಿಗೆ ಉತ್ತರ ನೀಡಲು.. "

"ಮಾತೆ ನಿನ್ನನ್ನು ಮೊದಲು ನೋಡಿದಾಗ.. ನನಗೆ ಭಯವೂ ಆಗಲಿಲ್ಲ.. ಗಂಟಲು ಕೂಡ ಬತ್ತಲ್ಲಿಲ್ಲ.. ಆದರೆ ಭಕ್ತಿಯಿಂದ ಮನಸ್ಸು ಹಕ್ಕಿಯಾಗಿತ್ತು.. ನಿನ್ನ ಮೊದಲು ಏನೆಂದು ಹೆಸರಿಸಲಿ ಎಂಬ ತರ್ಕಕ್ಕೆ ಮನದಲ್ಲಿ ಉತ್ತರವಿಲ್ಲದೆ ತಡಕಾಡುತ್ತಿತ್ತು.

"ಹೌದು ಮಗು.. ನಿನಗಾದ ಅನುಭವವೇ ಹಲವರಿಗೆ ಆಗಿದೆ ಆಗುತ್ತದೆ.. ಆಗುತ್ತಿರುತ್ತದೆ.. ಕಲ್ಮಶವಿಲ್ಲದ.. ಮನಪೂರ್ತಿ ನಗುತ್ತಾ ಎಲ್ಲರೊಡನೆ ತಾನು ಒಂದು ಎಂದು ಬೆರೆಯುವ ಮನಸ್ಸು ಎಂದಿಗೂ ಹಾಗೆ ಇರುತ್ತದೆ.. "

ಮಾತೆ ಇಂತಹ ಅನುಭವ ಎಲ್ಲರಿಗೂ ಆಗುತ್ತದೆ ಎಂದು ಹೇಳಿದೆಯಲ್ಲ.. ಅದಕ್ಕೆ ಏನಾದರೂ ಉತ್ತಮ ನಿದರ್ಶನಗಳು ಇವೆಯೇ.. ಅಥವಾ ಇದು ಸಾಧ್ಯವೇ..

"ಖಂಡಿತ ಸಾಧ್ಯ ಇದೆ ಕಾಳಿದಾಸ.. ವಿಜಯನಗರವಾಸಿ ಶ್ರೀ ಕೆಲವು ದಿನಗಳ ಹಿಂದೆ ಇವರ ಮನೆಗೆ ಹೋಗಿ ತನ್ನ ತಂಗಿ ಸಂಧ್ಯಾಳ ಮದುವೆಯ ಕರೆಯೋಲೆ ಪತ್ರ ಕೊಡಲು ಹೋದಾಗ.. ಅವರ ವ್ಯಕ್ತಿತ್ವದ ಪ್ರಭೆಯಲ್ಲಿ ಮಿಂದು ಹೊರಗೆ ಬಂದಾಗ ಅವನಲ್ಲಿ ಮೂಡಿದ ಮಾತುಗಳು ನೋಡು ಹೀಗಿವೆ"

"ರೂಪ ಅವರನ್ನು ಅಕ್ಕ ಎನ್ನಲೇ, ತಂಗಿ ಎನ್ನಲೇ, ಅತ್ತಿಗೆ ಎನ್ನಲೇ... ....
ಛೆ ಛೆ ಯಾಕಿಷ್ಟು ಗೊಂದಲ ಮನದಲ್ಲಿ ..
ತಡಿ ತಡಿ ಮಾತೆ ಜಗನ್ಮಾತೆ..
ಅಕ್ಕ, ತಂಗಿ, ಅತ್ತಿಗೆ ಇವಕ್ಕೆಲ್ಲ ಮೀರಿದ ಒಂದು ಭಾಂದವ್ಯ ಇದೆ...
ಅದೇ ಮಾತೆ .... ಗುರು ಮಾತೆ.. ...
ಕಾಳಿದಾಸನಿಗೆ ಆದ ಅನುಭವ ಇಂದು ನನಗಾಯಿತು..
ನನಗೆ ಸಿಕ್ಕ ಗುರುಮಾತೆ ನೀವು ರೂಪ..
ಇಂದು ನಿಮ್ಮ ಮುಂದೆ ಕುಳಿತು ಮಾತಾಡುತ್ತಿದ್ದಾಗ ಕಾಳಿದಾಸನಿಗೆ ತನ್ನ ಜಗನ್ಮಾತೆ ಮುಂದೆ ನಿಂತು  ಶ್ಯಾಮಲಾ ದಂಡಕ ಹಾಡಿದಾಗ ಸಿಕ್ಕ ಅನಿರ್ವಚನೀಯ ಅನುಭವ ನನಗಾಯಿತು...
ಹಾಟ್ಸ್ ಆಫ್ ರೂಪ ಹಾಟ್ಸ್ ಆಫ್..
ನಿಮಗೆ ಶಿರಬಾಗಿ ನಮಿಸುವೆ.. ನಿಮ್ಮನ್ನು ಗುರುಮಾತೆ ಎಂದು ಕರೆಯಲು ನನಗೆ ಅತೀವ ಆನಂದವಾಗುತ್ತಿದೆ...
ದೇವರೇ ನನಗಾಗಿ ಕಳಿಸಿದ ಸ್ನೇಹಿತೆ ಎಂದು ಹೇಳಲು ಹೆಮ್ಮೆ ಎನ್ನಿಸುತ್ತಿದೆ.. ನಿಮ್ಮನ್ನು DFR ಎಂದು ಕರೆಯಲೇ.. "

"ಮಾತೆ ಮಾತೆ ನನಗೆ ಮಾತೆ ಹೊರಡುತ್ತಿಲ್ಲ... ಶ್ರೀ ಸೌಖ್ಯವಾಗಿರಲಿ.. ತನ್ನ ಗುರುಮಾತೆಯ ಕುಟುಂಬಕ್ಕೆ ಸದಾ ಒಳ್ಳೆಯದಾಗಲಿ.. ಅಭಿವೃದ್ಧಿ, ಶಾಂತಿ ಎಲ್ಲವೂ  ಒಲಿಯಲಿ ಎಂದು ಹಾರೈಸುತ್ತೇನೆ ಕಾಳಿ ಮಾತೆ.... ಅದು ಸರಿ ಈ DFR ಅಂದರೆ ಏನು ಮಾತೆ" ಎಂದರು ಕಾಳಿದಾಸ...

"ಹೌದು ಕಾಳಿದಾಸ ನಿನ್ನ ಮಾತು ಅಕ್ಷರಶಃ ಸತ್ಯ.. ನಿನಗೆ ನನ್ನ ನೋಡಿದಾಗ ಆದ ಆನಂದ ಅಂದು ಶ್ರೀಗೆ ಆಯಿತು...ಮತ್ತೆ DFR ಅಂದರೆ  Devine Friend Roopa.. ಅಂದರೆ ದೈವಿಕ ಸ್ನೇಹಿತೆ ರೂಪ"

"ಅಬ್ಬಾ.. ಕೆಲವು ಅಕ್ಷರಗಳನ್ನು ಜೊತೆಯಲ್ಲಿ ನಿಲ್ಲಿಸಿದಾಗ ಎಂಥಹ ನುಡಿಮುತ್ತುಗಳಿಗೆ ಜನ್ಮ ನೀಡುತ್ತವೆ..ಸುಂದರ ಮಾತುಗಳು.. ಮಾತೆ ಇಷ್ಟವಾಯಿತು.. "

"ಇನ್ನೂ ಇದೆ ಕಾಳಿದಾಸ.. ಈ DFR ಕೈಗೆ ಸುಮ್ಮನೆ ಕೈ ಗಡಿಯಾರವನ್ನು ಕಟ್ಟಿ ಕೊಳ್ಳುತ್ತಾರೆ ಅಷ್ಟೇ.. ಅದರಲ್ಲಿ ಎಷ್ಟು ಘಂಟೆಗಳಿವೆ ಎಂದು ನಾನು ಅನೇಕಾ ಬಾರಿ ನೋಡಲು ಸೋತ್ತಿದ್ದೇನೆ.. ಕಾರಣ ಗೊತ್ತೇ"

"ಏನು ಮಾತೆ ಆ ಕಾರಣ...  ರಾಜಕಾರಣ"

"ಊರಾಚೆ ಎನ್ನಬಹುದಾದ ಬಹು ಅಂತರರಾಷ್ಟ್ರೀಯ ಕಂಪನಿಯಲ್ಲಿ ಕೆಲಸ.. ಸುಂದರ ಅರಳು ಪ್ರತಿಭೆಗಳ ಶರಧಿ... ಕ ಕ ಕ ಕುಟುಂಬದ ಒಡತಿ.. ಅರಳುತ್ತಿದೆ ಅರಳುತ್ತಿದೆ ಎಂದು ಹೇಳುವ "ಅರಳು" ಶಾಲೆಗೆ ಸ್ಫೂರ್ತಿ..ಹಲವಾರು ದೇವರ ಮಕ್ಕಳಿಗೆ ಮಾತೃ ಸ್ವರೂಪಿಣಿ.. ಮತ್ತೆ"

"ಕಾಳಿ ಮಾತೆ.. ಈ ಮೇಲಿನ ಮಾತುಗಳನ್ನು ಕೇಳಿ ದಣಿವಾರಿಸಿಕೊಳ್ಳುತ್ತಿದ್ದೇನೆ.... ಅಬ್ಬಾ ಮಾತೆ ಒಂದು ಮಾತು ಹೇಳಲೇ.. "

"ಹೇಳು ಕಂದಾ"

"ಈ DFR ಬಗ್ಗೆ ಮುಂಚೆ ನನಗೆ ಅರಿವಾಗಿದ್ದರೆ.. ನಿನ್ನ ಬಳಿ ಬೇಡುವುದರ ಬದಲು ಅವರ ಬಳಿಯೇ ವಿದ್ಯಾ ಬುದ್ದಿ ಮಾತ್ರವಲ್ಲದೆ... ಎಷ್ಟೇ ಸಾಧಿಸಿದರೂ ನನ್ನ ತಲೆ ನನ್ನ ಭುಜದ ಮೇಲೆ ಸದಾ ಇರಲಿ DFR ತರಹ ಎಂದು ಬೇಡಿಕೊಳ್ಳುತ್ತಿದ್ದೆ"

"ಆಹಾ.. ಮಗು ಕಾಳಿದಾಸ ಎಂಥಹ ಸುಮಧುರ ಯೋಚನೆ.. ಹೌದು ಮಗು.. ಇವತ್ತು ನೋಡು ಅವರ ಜನುಮದಿನಕ್ಕೆ ಹರಿದು ಬರುವ ಅಭಿಮಾನ ಪೂರಿತ ಮಾತುಗಳು.. ನನ್ನ ಮತ್ತು DFR ಅನುಬಂಧ..ಅವರ ಮುಂಗೈ ಮಣಿಕಟ್ಟಿನ ಮೇಲೆ ಇರುವ ಹಚ್ಚೆಯ ತರಹ.."

"ಅದರಲ್ಲೇನೂ ವಿಶೇಷ ಮಾತೆ "  



"ಜೀವನದಲ್ಲಿ ಕಷ್ಟಕ್ಕೆ ಸುಖಕ್ಕೆ ತಲೆಬಾಗುವುದನ್ನು ಕಲಿಸಿದ ಅಮ್ಮನ ಹೆಸರು ಮಡಿಸುವ ಭಾಗದಲ್ಲಿದ್ದರೆ ...ಜೀವನದಲ್ಲಿ ಬರುವ ಎಲ್ಲ ಸಾಧನೆಗಳಿಗೂ, ಪರೀಕ್ಷೆಗಳಿಗೂ ನೆಟ್ಟಗೆ ನಿಲ್ಲಬೇಕೆಂದು ಕಲಿಸುವ ಪಾಠ ಬಾಗುವುದಕ್ಕಾಗದ ಭಾಗದಲ್ಲಿದೆ.. ಹಾಗೆಯೇ ಕಲಿಸಿದ ಪಾಠ...  ಕಲಿಸುವ ಪಾಠ ಇವರೆಡರ ಮಧ್ಯೆ ನಿಲ್ಲುವುದೇ ಮಮತೆ, ಪ್ರೀತಿ, ಮಮಕಾರ.. ಅದರ ಚಿನ್ಹೆ ಅದರ ಮಧ್ಯೆ"

"ಕಾಳಿದಾಸ ಮಾತೆ .... ಅಮೋಘ ಅಮೋಘ.. ಸುಂದರ ಅತಿ ಸುಂದರ.. "

ಇಂತಹ ಸುಮಧುರ ಮನಸ್ಸಿನ DFR ಅವರ ಹುಟ್ಟು ಹಬ್ಬಕ್ಕೆ ಈ ಸುಂದರ ಲೇಖನವನ್ನು ನಾನು ಶ್ರೀ ಒಳಗೆ ಕೂತು ಬರೆಸುತ್ತಿದ್ದೇನೆ ಮಗು.. ಕಾಳಿದಾಸ.. ನೋಡು ಶ್ರೀ ಯನ್ನು ಹೇಗೆ ನಿಂತಿದ್ದಾನೆ..  ಮತ್ತು ಅವನ ಮನದೊಳಗಿನ ಮಾತು ಹೀಗಿವೆ

"ರೂಪ ದಯಮಾಡಿ ತಪ್ಪು ತಿಳಿಯಬೇಡಿ.....  ನಿಮ್ಮ ಜೊತೆ ಇಂದು ಮಾತಾಡುತ್ತ ಕುಳಿತಾಗ ನನ್ನ  ಮನಸ್ಸಲ್ಲಿ ಮೂಡಿದ ಮಾತುಗಳು ಈ ಲೇಖನವಾಗಿದೆ.. .. ನನ್ನ ಮನದಲ್ಲೇ ನಿಮ್ಮ ಮನಸ್ಸಿಗೆ ಕೈ ಮುಗಿಯುತ್ತಲೇ ಇತ್ತು ದೇವರ ಮುಂದೆ ನಿಂತ ಭಕ್ತನ ಹಾಗೆ... ಜನುಮ ದಿನದ ಶುಭಾಶಯಗಳು DFR"

"Wish you happy birthday DFR"

"right.. right .. Thank you Sri....!!!"

ಕಾಳಿಮಾತೆ ಮತ್ತು ಕಾಳಿದಾಸ ಇಬ್ಬರೂ ಅಂತರ್ದಾನವಾಗುತ್ತಾರೆ..

ಭೂಲೋಕದ ಸಮಸ್ತ ಜನತೆ ತಮ್ಮ ಅಭಿಮಾನ ಪೂರಿತ ಮಾತುಗಳಿಂದ ರೂಪ ಸತೀಶ್ ಅವರಿಗೆ ಶುಭಾಶಯಗಳನ್ನು ಕೋರುತ್ತಾ.. ಹೇಳುತ್ತಾರೆ ಇಂತಹ ಒಂದು ಸುಮಧುರ ಮನಸ್ಸಿನ ಡಾರ್ವಿನ್ ಸಿದ್ಧಾಂತದ ಮಾನವತ ಜೀವ.. ನಭೂತೋ ನಭವಿಷ್ಯತಿ.. !!!