Sunday, November 3, 2013

ನಗುವ ನಯನ ಮಧುರ ಪುಸ್ತಕ ... ಒಂದು ಸುಂದರ ಪುಸ್ತಕ ಬಿಡುಗಡೆ ಸಮಾರಂಭ

"ಪಾಯಿಂಟ್ ಪಂಚರಂಗಿಗೆ ಕಾಯ್ತಾ ಇರ್ತೀನಿ ಬೇಗ ಹಾಕಿ ಬಿಡಿ"

ಯಾಕೋ ದನಿ ಬಂದೆಡೆ ತಿರುಗಿದೆ... ಗಿಜಿ ಗಿಜಿ ಗುಜು ಗುಜು.. ಶಬ್ದಮಾಲಿನ್ಯ ವಿಪರೀತವಾಗಿತ್ತು.. ಎಲ್ಲರಲ್ಲಿಯೂ ಒಂದೇ ಪ್ರಶ್ನೆ..

"ಯಾಕಿಷ್ಟು ಸದ್ದು.. ಏನಿದು ಸದ್ದು?"

ಉತ್ತರ ಹೊಳೆಯುತ್ತಿಲ್ಲ ಯಾರಿಗೂ.. ಕಡೆಗೆ ಮಂಜುನಾಥ ಕಾಪಾಡಪ್ಪ ಎಂದು ಮೊರೆ ಹೋದರು

"ದೇವರು ಪ್ರತ್ಯಕ್ಷನಾಗಿ.. ಹೋಗ್ರಯ್ಯ.. ನನ್ನ ತಲೆ ನೋವು ನನಗೆ.. ಇದರ ಮಧ್ಯೆ ನಿಮ್ಮದು ಬೇರೆ"

"ಏನಾಯ್ತು ಸ್ವಾಮೀ ಹೇಳಿ"

"ಸತ್ಯಲೋಕದಲ್ಲಿ ಸರಸ್ವತಿ ಇಲ್ಲ.. ವೈಕುಂಠದಲ್ಲಿ ಲಕ್ಷ್ಮಿ ಇಲ್ಲ... ವಿಷ್ಣು ಕಾಲು ಚಾಚಿ ನಿದ್ದೆ ಮಾಡಿಬಿಟ್ಟಿದ್ದಾನೆ.. ಬ್ರಹ್ಮನ ನಾಲ್ಕೂ ತಲೆಗೆ ನೋವು ಬಂದು ಔಷದಿಗಾಗಿ ಧನ್ವಂತ್ರಿ ಹತ್ತಿರ ಹೋಗಿದ್ದಾನೆ.. ನನಗೆ ಅವರಿಬ್ಬರನ್ನು ಹುಡುಕುವ ಕೆಲಸ ಕೊಟ್ಟಿದ್ದಾನೆ... ಅದಕ್ಕೆ ನಾನು ಈ ನಾಲ್ವರಿಗೆ  ನನ್ನ ಅಂಶವನ್ನು ತುಂಬಿ ನಾಲ್ವರು ಈಶ್ವರರನ್ನು ಕಳಿಸಿದ್ದೇನೆ!"

ನಾಲ್ವರು ಈಶ್ವರರು 

ಆ ಮೂವರು ಈಶ್ವರ ಸ್ವರೂಪಿಗಳು  ನಿಧಾನವಾಗಿ ಹುಡುಕುತ್ತಾ ಬಂದರು.. ಎಲ್ಲಿಗೆ ಜಯಚಾಮರಾಜ ರಸ್ತೆಯ ಕನ್ನಡ ಭವನಕ್ಕೆ.. ಅರೆ ನಮ್ಮ ನಯನ ಇಲ್ಲೇ ಇದೆ.. ನೆಡಿರೋ ಹುಡುಕೋಣ ಅಂದು ಒಳಗೆ ಹೊಕ್ಕರು..

ಸರಸ್ವತಿ ಮತ್ತು ಲಕ್ಷ್ಮಿಯ ಸಮಾಗಮ 

ನೋಡಿದರೆ ಅಲ್ಲಿ ಸರಸ್ವತಿಯು ತನ್ನ ಪುತ್ರ ರತ್ನಗಳ ಪುಸ್ತಕದೊಳಗೆ ಕೂತಿದ್ದಾರೆ.. ಲಕ್ಷ್ಮಿಯು ಸರಸ್ವತಿ ಪುತ್ರನ ಕೈಯೊಳಗೆ ಅಡಗಿ ಕೂತಿದ್ದಳು..

ಇಲ್ಲಿಂದ ನೋಡಿ ಆರಂಭವಾಯಿತು ಅವರಿಬ್ಬರ ಹರಿಕಥೆ!

*********
ಶಾಲಿವಾಹನ ಶಕೆಯಲ್ಲಿ ಒಮ್ಮೆ ಸರಸ್ವತಿ, ಲಕ್ಷ್ಮಿ ಇಬ್ಬರು ಅಲೆದಾಡುತ್ತಾ ಬರುವಾಗ 
"ಅರೆ ಅಲ್ಲಿ ನೋಡು.. ಅಲ್ಲಿ ನೋಡು ಧಾರವಾಡದಿಂದ  ಬೇಂದ್ರೆ ಅಜ್ಜ  ಶಿಶುನಾಳದಿಂದ ಶರೀಫ  ಅಜ್ಜ ನೆಡೆದಾಡುತ್ತ ಬರುವಂತೆ, ನಮ್ಮ ಜೊತೆಯಲ್ಲಿ ಮಾತಾಡುವಂತೆ, ಅವರ ಮಾತುಗಳನ್ನು ಅನುಭವಿಸುವಂತೆ ಮಾಡುವ ಬ್ಲಾಗ್ ಲೋಕದ ಕಾಕ ಸುನಾಥ ಕಾಕ ಬರುತ್ತಿದ್ದಾರೆ.. ಆಹಾ ಎಂಥಹ ಭಾಗ್ಯ ನಮ್ಮದು ಇಂತಹ ಮೇರು ವ್ಯಕ್ತಿತ್ವವನ್ನು ಕಂಡ ನಾವೇ ಧನ್ಯರು.. ಬ್ಲಾಗ್ ಲೋಕದ ಅಂಬರದಲ್ಲಿ ಶ್ರೀ ಸುನಾಥ ಕಾಕ ಎಂದೇ ಹೆಸರಾದ ಶ್ರೀ ಎಸ್ ಎಲ್ ದೇಶಪಾಂಡೆಯವರು ಸರಳ ಸಜ್ಜನಿಕೆಗೆ ಒಂದು ಕಾವ್ಯಮಯ ಹೆಸರು.. ಪ್ರತಿಯೊಬ್ಬರನ್ನು ಮಾತಾಡಿಸುವ ರೀತಿ, ಎಲ್ಲರ ಲೇಖನಗಳಿಗೆ ಅವರು ಕೊಡುವ ಪ್ರತಿಕ್ರಿಯೆ ಆಹಾ ನಿಜಕ್ಕೂ ಒಂದು ವರವೇ ಸರಿ.. .. "ದೇಸಿ" ಪುಸ್ತಕ ಸಂಸ್ಕೃತಿಯನ್ನು ಹೆಚ್ಚಿಸುವ ಇಂತಹ ಪುತ್ರರತ್ನವನ್ನು ಪಡೆದ ಕರುನಾಡು ನಿಜಕ್ಕೂ ಹೆಮ್ಮೆಯ ನಾಡು..

"ಬದರಿನಾಥ ಎಂಬ ಹೃದಯಂಗಮ ಕವಿಯು ತನ್ನ ತನಗೆ ವಿದ್ಯೆ ಕಲಿಸಿದ ಗುರುಗಳನ್ನು ಸನ್ಮಾನಿಸಿ ತಾನು ಗುರು ಕಾಣಿಕೆಯನ್ನು ಸಲ್ಲಿಸಿದ್ದೆ ಅಲ್ಲದೆ.. ಗುರುಗಳು ಹೇಳಿಕೊಟ್ಟ ಪ್ರತಿ ಅಕ್ಷರಕ್ಕೂ ಅವರು ಹೆಮ್ಮೆ ಪಡುವಂತೆ ಕವನಗಳನ್ನು ರಚಿಸಿ ಓದುಗರ ಮನಸ್ಸನ್ನು ಸೂರೆಗೊಂಡಿದ್ದಾರೆ. ನಾನು ನನ್ನದು ಎನ್ನುವ ಈ ಪ್ರಪಂಚದಲ್ಲಿ ನಾವು ನಮ್ಮವರು ಎನ್ನುವ ಕಾಳಜಿ ಇರುವ ಅಶೋಕ್ ಶೆಟ್ಟಿ ಅಂಥಹ ಸುಮಧುರ ಸ್ನೇಹಿತ ಜೊತೆ ಇರುವಾಗ ಇಂತಹ ಸುಮಧುರ ಪ್ರಯತ್ನಕ್ಕೆ ಯಾವಾಗಲೂ ನಮ್ಮಿಬ್ಬರ  ಆಶೀರ್ವಾದ ಇದ್ದೆ ಇರುತ್ತದೆ . ಅದೇ ತಾನೇ ನಮಗೆ "ಕುಶಿ . ನಮ್ಮ ಮನೆಯ ದೀಪ"  ಅಲ್ಲವೇ ಲಕ್ಷ್ಮಿ ಎಂದರು ದೇವಿ ಸರಸ್ವತಿ..  

"ಹೌದು ಸರಸ್ವತಿ ನಿನ್ನ ಮಾತು ನಿಜ... ಅರೆ ಅಲ್ಲಿ ನೋಡು.. ಪಶ್ಚಿಮ ಘಟ್ಟಗಳ ತಿರುವು ಮುರುವು ರಸ್ತೆಯಂತೆ ಕಥೆಗಳಿಗೆ ಅಪೂರ್ವ ತಿರುವು ಕೊಡುತ್ತಾ ದಾರಿ ದೀವಿಗೆಯಾದ ಅಣ್ಣನನ್ನು ಸನ್ಮಾನಿಸುತ್ತಾ ಅವರ ಹಿರಿಮೆಯಲ್ಲಿ ತನ್ನ ಗರಿಮೆ ಕಾಯ್ದುಕೊಳ್ಳುವ ಬ್ಲಾಗ್ ಲೋಕದ ಪಡೆಯಪ್ಪ ಎಂದು ನಾಮಾಂಕಿತರಾದ ದಿನಕರ ಮೊಗೆರ ಅವರ ಸಂತಸವನ್ನು ನೀನು ಕಾಣೆಯ.  ಅವರ ಪ್ರಥಮ ಕೃತಿ ಚಾರ್ಮಾಡಿ ಘಟ್ಟದಷ್ಟೇ ಹಿತಕರ, ರೋಮಾಂಚಕಾರಿ.. ಅಷ್ಟೇ ವಸ್ತು ನಿಷ್ಠ ಪ್ರಸ್ತುತಿ..ಬಹಳ ಹಿತಕರ ವಾತಾವರಣವನ್ನು "ಸೃಷ್ಟಿ" ಮಾಡುತ್ತದೆ ಹೌದು ತಾನೇ ಸರಸ್ವತಿ !" 

"ತಮ್ಮ ಬರವಣಿಗೆಯನ್ನು ಇಷ್ಟಪಟ್ಟು ಬರೆಯುವ ಸ್ಪುರದ್ರೂಪಿ ಈ ಮಹೇಶ್ ಶ್ರೀ ದೇಶಪಾಂಡೆಯವರು.. ತಮ್ಮ ಮನಸ್ಸಿಗೆ ಅನ್ನಿಸಿದ ಅಕ್ಷರಗಳನ್ನು ಮಾಲೆಯನ್ನಾಗಿ ಮಾಡಿ ಅದಕ್ಕೆ ಕವನದ ರೂಪಕೊಟ್ಟು ಶತಪಥ ತಿರುಗುತ್ತಾ ತನ್ನ ಒಡಲಲ್ಲಿ ಜಿನುಗಿದ ಭಾವಗಳನ್ನು ಸುಳಿದಾಡುತ್ತ "ಸೃಷ್ಟಿ"ಯ ಸುಂದರ ಮಡಿಲಿಗೆ ಹಾಕಿರುವ  ಈ ಘಳಿಗೆ ಒಂದು ಸುಂದರ ಸೃಷ್ಟಿಯೇ ಸರಿ"

"ಹೌದು ಸರಸ್ವತಿ ಇವತ್ತು ನೀನು ಇವರ ಪುಸ್ತಕಗಳ ಒಳಗೆ ಕೂತು ಬಿಡುಗಡೆಗೊಳ್ಳುತ್ತಿರುವೆ... ಯಾರು ಯಾರು ಬಂದಿದ್ದಾರೆ ಹೇಳುವೆಯ"

"ಸುಂದರವಾಗಿರುವ ಐ ಪಿ ಎಸ್ ಅಧಿಕಾರಿ ಶ್ರೀ ಎಂ ನಂಜುಂಡಸ್ವಾಮಿ, ಅವಧಿ ಎನ್ನುವ ಅಂತರ್ಜಾಲ ಪತ್ರಿಕೆಯ ಪ್ರಧಾನ ಸಂಪಾದಕರು ಶ್ರೀ ಜಿ ಏನ್ ಮೋಹನ್, ಕಿರುತೆರೆಯಲ್ಲಿ ಮಂಗಳತ್ತೆ ಎಂದೇ ಖ್ಯಾತಿಯಾಗಿರುವ ಶ್ರೀಮತಿ ಜಯಲಕ್ಷ್ಮಿ ಪಾಟೀಲ್, ಸುವರ್ಣ ವಾಹಿನಿಯ ಪ್ರಧಾನ ಛಾಯಗ್ರಾಹಕರು ಶ್ರೀ ಸತ್ಯಬೋಧ ಜೋಷಿ.. ಇವರ ಜೊತೆಯಲ್ಲಿ ಲೇಖಕರಾದ ಶ್ರೀ ಸುನಾಥ ದೇಶಪಾಂಡೆ, ಶ್ರೀ ಬದರಿನಾಥ ಪಲವಳ್ಳಿ, ಶ್ರೀ ದಿನಕರ್ ಮೊಗೆರ, ಮತ್ತು ಶ್ರೀ ಮಹೇಶ ದೇಶಪಾಂಡೆ.. ಇವರೆಲ್ಲ ವೇದಿಕೆಯಲ್ಲಿ ಆಸೀನರಾಗಿದ್ದಾರೆ.. "

ಓಹ್ ಸುಂದರ ಸಮಾರಂಭಕ್ಕೆ ಸುಂದರ ಆರಂಭ ಬೇಕು... ಬುದ್ದಿವಂತೆ, ಚತುರಮತಿ, ಅಪಾರ ಜ್ಞಾನ ವಾಹಿನಿ ಕುಮುದಾವಲ್ಲಿ ಅವರ ಆರಂಬಿಕ ಮಾತುಗಳು ಸೊಗಸಾಗಿತ್ತು. ಇಡಿ ಕಾರ್ಯಕ್ರಮ ಅವರ ಸುಂದರ ನಿರೂಪಣೆಯಿಂದ ಶೋಭಾಯಮಾನವಾಗಿತ್ತು.. ಹಳಿ ತಪ್ಪಿದಂತೆ ಕಂಡಾಗ ಮತ್ತೆ ಆ ರೈಲು ಗಾಡಿಯನ್ನು ಮತ್ತೆ ಹಳಿಗೆ ತಂದು ಕಾರ್ಯಕ್ರಮ ಒಂದು ಸಂತಸದ ಪೆಟ್ಟಿಗೆ ಯನ್ನಾಗಿ ಮಾಡಿದ ಅವರ ಪರಿಶ್ರಮ ನಿಜಕ್ಕೂ ಶ್ಲಾಘನೀಯ. 

"ನಂತರ ಉಷಾ ಉಮೇಶ ಅವರ ಪ್ರಾರ್ಥನಾ ಗೀತೆ, ನಂತರ ಶುರುವಾಯಿತು ನಿಜಕ್ಕೂ ಒಂದು ಸ್ಮರಣೀಯ ಘಳಿಗೆ.. "

ಸುಂದರ ಸುವರ್ಣ ಸಂಭ್ರಮ!

"ವೇದಿಕೆಯಲ್ಲಿದ್ದ ಎಲ್ಲರೂ ಪ್ರೇಕ್ಷಕರ ಕರತಾಡನದ ನಡುವೆ ಪುಸ್ತಕದಲ್ಲಿದ್ದ ಸರಸ್ವತಿಯನ್ನು "ಪ್ರಕಾಶ"ಕ್ಕೆ ತಂದರು.. ವೇದಿಕೆಯ ಮಹನೀಯರೆಲ್ಲ  ಪುಸ್ತಕಗಳ ಬಗ್ಗೆ ತಮ್ಮ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು, ಮೆಚ್ಚುಗೆಗಳನ್ನು ಚುಟುಕು ಮಾತುಗಳಲ್ಲಿ ತಮ್ಮ ಧನ್ಯತೆಯನ್ನು ಸಲ್ಲಿಸಿದರು.. "
ಆತ್ಮೀಯ ಮಾತುಗಾರಿಕೆ - ಶ್ರೀ ಸುನಾಥ ದೇಶಪಾಂಡೆ 
ಮನಮೋಹಕ ನಿರೂಪಣೆ - ಶ್ರೀಮತಿ ಕುಮುದವಲ್ಲಿ 

ಸುಂದರ ಅಧಿಕಾರಿ ಶ್ರೀ ನಂಜುಂಡಯ್ಯ 

ಸುಮಧುರ ಮಾತುಗಳ ಸರದಾರಿಣಿ ಮಂಗಳತ್ತೆ ಅಲಿಯಾಸ್ ಶ್ರೀಮತಿ ಜಯಲಕ್ಷ್ಮಿ ಪಾಟೀಲ್ 

 ಪ್ರಧಾನ ಛಾಯಗ್ರಾಹಕರು ಶ್ರೀ ಸತ್ಯಬೋಧ ಜೋಷಿ

ನಮ್ಮೆಲ್ಲರ ಪ್ರೀತಿಯ ದಿನಕರ್ ಸೆರೆಯಾದದ್ದು ಹೀಗೆ ಉಮೇಶ್ ಮತ್ತು ಪ್ರಕಾಶಣ್ಣ ನ ಪ್ರೀತಿಯ ಬಂಧನದಲ್ಲಿ 

ಮಹೇಶ್ ದೇಶಪಾಂಡೆ ಯವರ ಮಾತುಗಾರಿಕೆ 

ಪ್ರೀತಿಯ ಡಾಕ್ಟರ್ ಡಿ ಟಿ ಕೃಷ್ಣಮೂರ್ತಿ ಗಾಯನದ ಹಾದಿಯಲ್ಲಿ 

ಅವಧಿಯ ಶ್ರೀ ಜಿ ಏನ್ ಮೋಹನ್ ಸುಂದರ ಮಾತುಗಳು 
"ಎಲ್ಲರನ್ನು ಸನ್ಮಾನಿಸಿ ಸಡಗರದಿಂದ ಸ್ವಾಗತ ಭಾಷಣ ಮಾಡಿದ ಎಲ್ಲರ ಸಹೃದಯ ಮಿತ್ರ ಶ್ರೀ ಅಶೋಕ್ ಶೆಟ್ಟಿಯವರಿಗೆ, ಸೊಗಸಾದ ವಂದನಾರ್ಪಣೆ ಮಾತುಗಳನ್ನು ಹೇಳಿದ ಶ್ರೀ ಉಮೇಶ್ ದೇಸಾಯಿಯವರಿಗೆ, ಮತ್ತು ನಮ್ಮೆಲ್ಲರ ಕೊಳಲು ಬ್ಲಾಗ್ ಲೇಖಕ ಸುಂದರ, ಸಿರಿವಂತ ಮನಸ್ಸಿನ, ಹಾಗೂ ಸಿರಿ ಕಂಠದ ಡಾಕ್ಟರ್ ಡಿ ಟಿ ಕೃಷ್ಣಮೂರ್ತಿ  ಇವರೆಲ್ಲ ಕಾರ್ಯಕ್ರಮವನ್ನು ಉತ್ತಮ ಮಜಲಿಗೆ ಕೊಂಡೊಯ್ದರು..  ಅಲ್ವ ಲಕ್ಷ್ಮಿ"

"ಇವರೆನ್ನಲ್ಲ ಒಂದೇ ಭಾವ ಬಂಧನದಲ್ಲಿ ಬೆಸೆಯುವ ಇಟ್ಟಿಗೆ ಸಿಮೆಂಟ್ ಬ್ಲಾಗ್ ಕತೃ ಅಮೋಘ ಹಾಸ್ಯ ಪ್ರಜ್ಞೆ ಇರುವ, ಹೃದಯವಂತ ಶ್ರೀ ಪ್ರಕಾಶ್ ಹೆಗಡೆ ಮತ್ತು ಗೆಳೆತನಕ್ಕೆ ಒಂದು ಉತ್ತಮ ಉದಾಹರಣೆಯಾಗುವ ಶ್ರೀ ಆಜಾದ್ ಸರ್ ಮತ್ತು ಪ್ರತಿಯೊಬ್ಬರ ಹೆಸರನ್ನು ಹೇಳದೆ ಇದ್ದರೂ ಬ್ಲಾಗ್ ಲೋಕದ ತಾರೆಗಳು ಎಂದರೆ ಸಾಕು ಎನ್ನುವ ಬ್ಲಾಗ್ ಲೋಕದ ಕಲಾ ಮಣಿಗಳು ಸೇರಿ ಮುನ್ನೆಡೆಸಿದ ಈ ಕಾರ್ಯಕ್ರಮ ಒಂದು ನವಿರಾದ ಘಳಿಗೆಗಳು ಎಂದರೆ ತಪ್ಪಿಲ್ಲ ಅಲ್ಲವೇ ಸರಸ್ವತಿ" 

ಹಿರಿ ಕಿರಿಯರನ್ನು ಸನ್ಮಾನಿಸುವ, ಅವರ ಆಶೀರ್ವಾದ ಅಭಿನಂದನೆಗಳನ್ನು ಪಡೆಯುವ ಬ್ಲಾಗ್ ಲೋಕದ ಶ್ರಮ ಸಂಪ್ರದಾಯ ನಿಜಕ್ಕೂ ಅನುಕರಣೀಯ... ಅಕ್ಷರ ಸಂಬಂಧ ರಕ್ತ ಸಂಬಂಧಕ್ಕಿಂತ ದೊಡ್ಡದು ಎಂದು ಪ್ರತಿಪಾದಿಸಿದ ಈ ಕಾರ್ಯಕ್ರಮ ನಿಜಕ್ಕೂ ಒಂದು ಅಮರ ಸಂದೇಶ ಸಾರುತ್ತದೆ. ದೀಪಾವಳಿ ಹಬ್ಬ, ಭಾನುವಾರ, ಸಾಲು ಸಾಲು ರಜ ಇಷ್ಟಿದ್ದರೂ ತುಂಬಿ ತುಳುಕುತ್ತಿದ್ದ ಸಭಾಂಗಣ, ಆಸಕ್ತರಿಂದ ಕೂಡಿದ್ದ ಸಭೆಯಲ್ಲಿ ಕುಳಿತುಕೊಳ್ಳಲು ಸ್ಥಳವಿಲ್ಲದಿದ್ದರೂ ನಿಂತೇ ನೋಡಿ ಇಡಿ ಸಮಾರಂಭವನ್ನು ಕಣ್ಣಲ್ಲಿ, ಕ್ಯಾಮರದಲ್ಲಿ  ತುಂಬಿಕೊಂಡು ಬಂದ ಪ್ರೇಕ್ಷಕರು ದೇವರ ಕಡೆಗೆ ತಿರುಗಿ 

"ದೇವರೇ ಸರಸ್ವತಿ ಲಕ್ಷ್ಮಿ ಒಂದೇ ಕಡೆ ನೆಲೆಸಿರುವ ಈ ಬ್ಲಾಗ್ ಲೋಕದಲ್ಲಿ ಸದಾ ನಗು ಲವಲವಿಕೆ ತುಂಬಿರಲಿ" ಎನ್ನುವಲ್ಲಿಗೆ ಈ ಹರಿಕಥೆ ಮುಕ್ತಾಯ ವಾಯಿತು.. 

ಆದರೆ ಇದು ಅಂತ್ಯವಲ್ಲ ಆರಂಭ... !!!